`ಕೃಷಿಕರ ಬ್ಯಾಂಕ್ ಎಂದೇ ಖ್ಯಾತಿ ಪಡೆದ ಕೇರಳ ಗ್ರಾಮೀಣ ಬ್ಯಾಂಕ್ ಒಂದು ಹೆಮ್ಮೆಯ ಮೈಲುಗಲ್ಲು ದಾಟಿದೆ. ರಾಜ್ಯದಾದ್ಯಂತ ೬೩೫ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿರುವ ಈ ಬ್ಯಾಂಕ್ನಲ್ಲಿ ಗ್ರಾಹಕರ ಒಟ್ಟು ಠೇವಣಿ 60,000 ಕೋಟಿ ರೂಪಾಯಿಗಳನ್ನು ಮುಟ್ಟಿದೆ. ಈ ಸಾಧನೆಯ ಸಂತೋಷವನ್ನು ಪಾವೂರು ಶಾಖೆಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.

ಗ್ರಾಹಕರು, ಕೃಷಿಕರು, ಬ್ಯಾಂಕ್ ಸಿಬ್ಬಂದಿ ಒಟ್ಟಾಗಿ ಸೇರಿ ದೀಪ ಬೆಳಗಿಸಿ, ಕೇಕ್ ಕತ್ತರಿಸುವ ಮೂಲಕ ಸಂಭ್ರಮದ ಕೂಟವನ್ನು ಆಚರಿಸಿದರು.
ಕಾರ್ಯಕ್ರಮಕ್ಕೆ ಪಾವೂರು ಶಾಖಾ ವ್ಯವಸ್ಥಾಪಕಿ ಶ್ರೀಮತಿ ಶ್ರುತಿ ಸಿ. ಅಧ್ಯಕ್ಷತೆ ವಹಿಸಿದ್ದರು. ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿಶೇಷ ಅತಿಥಿಗಳಾಗಿ ತ್ಯಾಂಪಣ್ಣ ರೈ (ಮುಟ್ಲ), ಸುಧಾಕರ ಕೊಂಬಗುರಿ, ಪೋಸ್ಟ್ಮಾಸ್ಟರ್ ಪ್ರಕಾಶ್ ಕಾಪು ಭಾಗವಹಿಸಿದ್ದರು. ಬ್ಯಾಂಕ್ ಸಿಬ್ಬಂದಿಗಳಾದ ರಿಜಿನ್, ಶಾನೇಶ್, ವೀಣಾ, ಯೋಗೇಶ್ ಆಚಾರಿ ಹಾಗೂ ಹಲವಾರು ಕೃಷಿಕ-ಗ್ರಾಹಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಕೋರಿದರು. ರಿಜಿನ್ ಸ್ವಾಗತಿಸಿದರು, ವೀಣಾ ವಂದನಾರ್ಪಣೆಗೈದರು.
ಕೃಷಿಕರ ಬೆನ್ನೆಲುಬಾಗಿರುವ ಈ ಬ್ಯಾಂಕ್ ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಗೆ ನೀಡುತ್ತಿರುವ ಕೊಡುಗೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ೬೦ ಸಾವಿರ ಕೋಟಿ ಠೇವಣಿ ಕೇವಲ ಅಂಕಿಯಲ್ಲ, ಇದು ಲಕ್ಷಾಂತರ ಕೃಷಿಕರ ವಿಶ್ವಾಸದ, ಬ್ಯಾಂಕಿನ ಸೇವೆಯ ಸಾರ್ಥಕತೆಯ ಸಂಕೇತವಾಗಿದೆ.
ವರದಿ: ಗಣೇಶ್ ಪಾವೂರು