ವೀರ ವೇದಾಂತಿ, ವಿಶ್ವಮಾನವ, ಸ್ವಾಮಿ ವಿವೇಕಾನಂದರ ದಿವ್ಯಲೀಲಾಕ್ಷೇತ್ರವಾದ ಸಾಲಿಗ್ರಾಮದ ಡಿವೈನ್ ಪಾರ್ಕ್ ಸಂಸ್ಥೆಯ ನಿರ್ದೇಶಕ ಡಾಕ್ಟರ್ಜೀ (ಡಾ. ಎ. ಚಂದ್ರಶೇಖರ ಉಡುಪ) ಯವರು ಜನವರಿ 7ರಂದು ಹೃದಯಾಘಾತದಿಂದ ನಿಧನ ಹೊಂದಿರುವರು. ವೃತ್ತಿಯಲ್ಲಿ ವೈದ್ಯರಾಗಿದ್ದ ಅವರು ಡಿವೈನ್ ಪಾರ್ಕ್ ಮೂಲಕ ಕಳೆದ 50 ವರ್ಷಗಳಿಂದ ವ್ಯಕ್ತಿತ್ವ ನಿರ್ಮಾಣ, ರಾಷ್ಟ್ರೋದ್ಧಾರದ ಕನಸನ್ನು ನನಸಾಗಿಸುವಲ್ಲಿ, ಆರೋಗ್ಯ ಮತ್ತು ಆಧ್ಯಾತ್ಮಿಕ ಚಿಂತನೆ, ಸಾಮಾಜಿಕ, ಧಾರ್ಮಿಕ ಸೇವೆಯ ನೆಲೆಯಲ್ಲಿ ಕಾರ್ಯನಿರ್ವಹಿಸುವ ಮೂಲಕ ನಾಡಿನಾದ್ಯಂತ ದೇಶ ವಿದೇಶಗಳಲ್ಲೂ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದರು. ಇವರ ಮಾರ್ಗದರ್ಶನದಲ್ಲಿ ಡಿವೈನ್ ಪಾರ್ಕ್ನ ಸಹಸಂಸ್ಥೆಯಾಗಿ ಎಸ್ಹೆಚ್ಆರ್ಎಫ್ (ಯೋಗಬನ) ಸ್ಥಾಪನೆಯಾಗಿ, ಯೋಗ ಮತ್ತು ಸಮಗ್ರ ಆರೋಗ್ಯದ ಕುರಿತು ಜನಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ.

ದೇಶದ ವಿವಿಧ ಭಾಗಗಳಲ್ಲದೆ ವಿದೇಶಗಳಲ್ಲಿಯೂ ಇವರ ಸಾವಿರಾರು ಭಕ್ತರು ಮತ್ತು ಅನುಯಾಯಿಗಳಿದ್ದು, ಎಲ್ಲರೂ ಅವರನ್ನು ಪ್ರೀತಿಯಿಂದ ‘ಡಾಕ್ಟರ್ಜೀ’ ಎಂದು ಕರೆಯುತ್ತಿದ್ದರು. ನೊಂದವರಿಗೆ ತಮ್ಮ ಪ್ರೇರಣಾದಾಯಕ ಮಾತುಗಳ ಮೂಲಕ ಸಾಂತ್ವನ ಸೇವೆ ಹಾಗೂ ಜ್ಞಾನ ಪ್ರಸರಣದ ಮುಖೇನ ಜನರನ್ನು ಸಾಧನಾಶೀಲರನ್ನಾಗಿಸುವ ಕೈಂಕರ್ಯದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದ ಆದಿತ್ಯ ಚೇತನ ಜನವರಿ 7ರಂದು ಪಂಚಭೂತಗಳಲ್ಲಿ ಲೀನವಾಗಿದೆ ಎನ್ನಲು ಅಪಾರ ದುಃಖವಾಗುತ್ತಿದೆ.
ಆ ಪ್ರಯುಕ್ತ ಡಿವೈನ್ ಪಾರ್ಕ್ನ ಮಹಾರಾಷ್ಟ್ರ ಘಟಕದ ಎಲ್ಲಾ ಬಳಗಗಳು ಸಂಯುಕ್ತವಾಗಿ ಪ್ರಾರ್ಥನಾ ಸಭೆಯನ್ನು ದಿನಾಂಕ 11-01-2026, ಭಾನುವಾರ ಮಧ್ಯಾಹ್ನ ಗಂಟೆ 3.30ಕ್ಕೆ ಸಾಂತಾಕ್ರುಜ್, ಬಿಲ್ಲವ ಭವನದಲ್ಲಿ ಏರ್ಪಡಿಸಲಾಗಿದೆ. ಸದ್ಭಕ್ತರೆಲ್ಲರೂ ಈ ಸಭೆಯಲ್ಲಿ ಪಾಲ್ಗೊಳ್ಳಬೇಕಾಗಿ ಡಿವೈನ್ ಪಾರ್ಕ್ ಮುಂಬಯಿಯ ಅಧ್ಯಕ್ಷರಾದ ಡಾ| ಸತಿಶಂಕರ್ ಕಾಮತ್, ಕಾರ್ಯದರ್ಶಿ ವಿಶ್ವನಾಥ್ ತೋನ್ಸೆ, ಖಜಾಂಚಿ ಶ್ರೀ ಮಾಧವ ಕಾಂಚನ್ರವರು ವಿನಂತಿಸಿದ್ದಾರೆ.
ಶ್ರದ್ಧಾಂಜಲಿ ಮತ್ತು ಪ್ರಾರ್ಥನಾ ಸಭೆ
ಗೌರವಾರ್ಥ: ಡಾ. ಎ. ಚಂದ್ರಶೇಖರ ಉಡುಪ (ಡಾಕ್ಟರ್ಜೀ)
ದಿನಾಂಕ: 11 ಜನವರಿ 2026, ಭಾನುವಾರ
ಸಮಯ: ಮಧ್ಯಾಹ್ನ 3:30ಕ್ಕೆ
ಸ್ಥಳ: ಬಿಲ್ಲವ ಭವನ, ಸಾಂತಾಕ್ರೂಜ್, ಮುಂಬಯಿ.